ಕೊಪ್ಪ: ಹರಿಹರಪುರ ಮಠದಲ್ಲಿ ಏ.19 ರಿಂದ 23 ರ ವರೆಗೆ ಬ್ರಹ್ಮೋತ್ಸವ ಜಾತ್ರಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬುಧವಾರ ಮಠದ ಆವರಣದಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆಗೊಳಿದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರ ಆಪ್ತ ಕಾರ್ಯದರ್ಶಿ ರಘುನಾಥ ಶಾಸ್ತ್ರಿ ಈ ಬಗ್ಗೆ ಮಾಹಿತಿ ನೀಡಿದರು.
ಈ ಬಾರಿ ಜಾತ್ರಾ ಕಾರ್ಯಕ್ರಮವನ್ನು ನಾವು ಕೇವಲ ಧಾರ್ಮಿಕ ವಿಧಿ ವಿಧಾನಗಳಿಗೆ ಸೀಮಿತಗೊಳಿಸದೆ ಸಾಮಾಜಿಕ ಕಾರ್ಯಕ್ರಮವಾಗಿ ಮಾಡಬೇಕು ಎಂದು ಗುರುಗಳ ಅಪ್ಪಣೆಯಾಗಿದೆ, ಅದರಂತೆ ನಡೆಯಲಿದೆ ಎಂದರು.
ಜಾತ್ರಾ ಸಂದರ್ಭದಲ್ಲಿ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ವಿಶೇಷ ಪೂಜೆ, 9ಕ್ಕೆ ಮಾತೆಯರಿಂದ ಕುಂಕುಮಾರ್ಚನೆ, 10.30ಕ್ಕೆ ಧರ್ಮಸಭೆ ನಡೆಯಲಿದೆ. ಈ ಸಭೆಯಲ್ಲಿ ವಿವಿಧ ಸಮುದಾಯದ ಸ್ವಾಮೀಜಿಯವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
5 ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಭಕ್ತರು ಆಗಮಿಸಲಿದ್ದಾರೆ, ದೂರದ ಊರುಗಳಿಂದ ಬರುವ ಭಕ್ತರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಠದ ವ್ಯವಸ್ಥಾಪಕ ಕೃಷ್ಣಮೂರ್ತಿ ಭಟ್ ಮಾತನಾಡಿ, ಇದು ಸಮಾಜದ ಉತ್ಸವವಾಗಬೇಕು. ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಬಾರದು ಎಂದರು. ಸ್ವಾಮೀಜಿಯವರು ಆಶಯದಂತೆ ಇದು ಎಲ್ಲರನ್ನೂ ಒಳಗೊಂಡು ಕಾರ್ಯಕ್ರಮವಾಗಬೇಕು, ಊಟೋಪಚಾರ, ಸಾಂಸ್ಕೃತಿಕ ಕಾರ್ಯಕ್ರಮವಿದ್ದು, ಕೊನೆಯ ದಿನ ರಾಜಬೀದಿ ಉತ್ಸವ, ತೆಪ್ಪೋತ್ಸವ ಇರುತ್ತದೆ. ಇದೇ ರೀತಿ ಮುಂದಿನ ದಿನಗಳಲ್ಲಿ ಹರಿಹರಪುರ ಉತ್ಸವ ನಡೆಯಬೇಕೆಂಬುದು ಆಶಯ ವ್ಯಕ್ತಪಡಿಸಿದರು.
ಇದೇ ತಿಂಗಳು 18ನೇ ತಾರೀಖಿಗೆ ಸಂಜೆ 4 ಗಂಟೆಗೆ ಮಠದ ಎದುರು ಭಕ್ತರಿಂದ ಹೊರೆಕಾಣಿಕೆ ಸ್ವೀಕರಿಸಲಾಗುತ್ತಿದ್ದು, ವಿಶೇಷವಾಗಿ ನಡೆಯುತ್ತಿರುವ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸರ್ವರನ್ನೂ ಸ್ವಾಗತಿಸುತ್ತಿದ್ದೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಸದ್ಗುರು ಸೇವಾ ಸಮಿತಿ ಕಾರ್ಯದರ್ಶಿ ಕೆರೆಕೊಡಿಗೆ ಶಶಿಶೇಖರ್, ಜೆ.ಎಂ.ಶ್ರೀಹರ್ಷ ಉಪಸ್ಥಿತರಿದ್ದರು.
ಜಾಹೀರಾತು/Advertisment
0 Comments